ಪರಿಮಳಾ ಜಗ್ಗೇಶ್ ರೇಡಿಯೋಸಿಟಿ 91.1 ಎಫ್‌ಎಂ ರೇಡಿಯೋದಲ್ಲಿ
Posted date: 18 Fri, Sep 2015 – 10:18:45 PM

ಇದೇ ಭಾನುವಾರದಿಂದ  ಬೆ.೮ರಿಂದ೧೦ರ ಸಮಯಕ್ಕೆ ರೇಡಿಯೋಸಿಟಿ ೯೧.೧ ಎಫ್‌ಎಂ ರೇಡಿಯೋದಲ್ಲಿ ಹೊಚ್ಚಹೊಸ ಬಗೆಯ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿದೆ. ಸಾಮಾನ್ಯವಾಗಿ ವಿಶೇಷ ಕಾರ್ಯಕ್ರಮಗಳೆಂದರೆ, ಅಲ್ಲಿ ಸೆಲೆಬ್ರೆಟಿಗಳನ್ನು ಕರೆಸಿ, ಅವರು ಬದುಕು, ಸಾಧನೆಯನ್ನು ಬಣ್ಣಿಸುವುದು ಮತ್ತು ನಡೆದುಬಂದ ಹಾದಿಯ ಬಗ್ಗೆ ಸಂದರ್ಶಿಸುವುದೇ ಆಗಿರುತ್ತದೆ. ಆದರೆ ಈಗ ಆರಂಭವಾಗುತ್ತಿರುವ ಕಾರ್ಯಕ್ರಮದ ಹೆಚ್ಚುಗಾರಿಕೆಯೆಂದರೆ, ನಾನಾ ರಂಗಗಳಲ್ಲಿ ಹೆಸರು ಮಾಡಿರುವ ಸೆಲೆಬ್ರಿಟಿಗಳ ಪತ್ನಿಯರೇ ಇಲ್ಲಿನ ಅತಿಥಿಗಳು!  
ಇಂಥ ವಿನೂತನ ಪ್ರಯೋಗ, ಅದರಲ್ಲೂ ರೇಡಿಯೋ ಚಾನೆಲ್‌ವೊಂದರಲ್ಲಿ ಮೂಡಿಬರುತ್ತಿರುವುದು ಇದೇ ಮೊದಲು. ಈ ಕಾರ್ಯಕ್ರಮದಲ್ಲಿ ಮತ್ತೊಂದು ಸರ್‌ಪ್ರೈಸ್ ಇದೆ. ಅದೇನೆಂದರೆ, ಈ ಎಲ್ಲಾ ಸೆಲೆಬ್ರೆಟಿಗಳನ್ನು ಸಂದರ್ಶಿಸುತ್ತಿರುವುದು ಕನ್ನಡ ಚಲನಚಿತ್ರ ಕಂಡ ಅತ್ಯದ್ಭುತ ನಟ, ತಮ್ಮ ಮುಖಭಾವ, ಆಂಗಿಕ ಅಭಿನಯ ಮತ್ತು ತಮ್ಮದೇ ಶೈಲಿಯ ದನಿಯಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ, ನವರಸನಾಯಕ ಜಗ್ಗೇಶ್ ಅವರ ಪತ್ನಿ ಪರಿಮಳಾ ಜಗ್ಗೇಶ್! ಹೀಗೆ ಸಾಧಕರ ಮಡದಿಯರ ಮನದಾಳದ ಮಾತುಗಳೊಂದಿಗೆ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮದ ಹೆಸರು ‘ಪರಿಚಯ ವಿತ್ ಪರಿಮಳ!!
ಸಾಮಾನ್ಯಕ್ಕೆ ಸೆಲೆಬ್ರೆಟಿಗಳ ಪತ್ನಿಯರೆಂದರೆ, ‘ಅವರಿಗೆ ಸಮಸ್ಯೆಗಳೇ ಇರುವುದಿಲ್ಲ. ಸುಖದ ಸುಪ್ಪತ್ತಿಗೆಯಲ್ಲಿರುತ್ತಾರೆ... ಎಂಬಿತ್ಯಾದಿ ಭಾವನೆಗಳು ಜನರಲ್ಲಿ ಮನೆಮಾಡಿರುತ್ತದೆ. ಆದರೆ ವಾಸ್ತವ ಸಂಗತಿಯೇ ಬೇರೆ. ಎಂಥಾ ಸೆಲೆಬ್ರೆಟಿಗಳ ಕೈ ಹಿಡಿದವರೇ ಆದರೂ ಅವರಿಗೂ ಮನುಷ್ಯ ಸಹಜವಾದ ಭಾವನೆಗಳು, ವೈಯಕ್ತಿಕ ಬಯಕೆ, ನಿರೀಕ್ಷೆಗಳಿರುತ್ತವೆ. ಎಲ್ಲಕ್ಕಿಂತಾ ಮುಖ್ಯವಾಗಿ ತಮ್ಮ ಪತಿ ಸಾಮಾಜಿಕವಾಗಿ ಬೆಳೆದುನಿಲ್ಲಲು, ಮಾನಸಿಕವಾಗಿ ಸದೃಢವಾಗಿರುವಲ್ಲಿ ಮತ್ತು ಹಲವು ವೇಳೆ ಆರ್ಥಿಕ ವಿಚಾರದಲ್ಲೂ ಗಟ್ಟಿಗೊಳ್ಳಲು ಶ್ರಮಿಸಬೇಕಾಗುತ್ತದೆ. ಇದೆಲ್ಲದರ ಮಧ್ಯೆ ತಂದೆಯ ಕೀರ್ತಿ ಪತಾಕೆಗಳೇನೇ ಇದ್ದರೂ ತಮ್ಮ ಮಕ್ಕಳನ್ನು  ಉತ್ತಮ ಪ್ರಜೆಗಳನ್ನಾಗಿ ರೂಪಿಸಲೇಬೇಕಾದ ಅನಿವಾರ್ಯತೆ ಮತ್ತು ಸವಾಲುಗಳೂ ಎದುರಾಗುತ್ತವೆ.
ಖ್ಯಾತಿಯ ಉತ್ತುಂಗದಲ್ಲಿರುವ ವ್ಯಕ್ತಿಯ ಪತ್ನಿಯಾಗಿರುವುದರಿಂದ ತಮ್ಮ ಮನಸ್ಸಿನ ಭಾವನೆಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುವ ಸ್ವಾತಂತ್ರ್ಯ ಕೂಡಾ ಹಲವು ಬಾರಿ ಇಲ್ಲದಂತಾಗಿರುತ್ತದೆ. ಹೀಗೆ ಎಲ್ಲೂ ಹೊರಬರದೇ, ಉಳಿದುಹೋದ ಮಾತುಗಳನ್ನು ಜನಸಾಮಾನ್ಯರಿಗೆ ಅವರದ್ದೇ ದನಿಯಲ್ಲಿ ಕೇಳಿಸುವುದು ‘ಪರಿಚಯ ವಿತ್ ಪರಿಮಳ ಕಾರ್ಯಕ್ರಮದ ಉದ್ದೇಶ.
ಅಂದಹಾಗೆ, ಪರಿಮಳ ಜಗ್ಗೇಶ್ ಈ ಕಾರ್ಯಕ್ರಮದ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಜಗ್ಗೇಶ್ ಅವರನ್ನು ಕೈ ಹಿಡಿದ ಆರಂಭದ ದಿನಗಳಲ್ಲಿ, ಬದುಕಿನ ದಾರಿ ಕಂಡುಕೊಳ್ಳಲು ಅಪಾರ ಯಾತನೆ ಅನುಭವಿಸಿದ್ದ, ಎಲ್ಲ ಕಷ್ಟಗಳನ್ನೂ ಮೆಟ್ಟಿ ನಿಂತು ತನ್ನ ಪತಿ ಈಶ್ವರ್, ಜಗ್ಗೇಶ್ ಎಂಬ ಸ್ಟಾರ್ ಆಗಿ ಹೊರಹೊಮ್ಮಲು ಕಾರಣರಾದವರು ಪರಿಮಳಾ. ಜಗ್ಗೇಶ್ ಬಿಡುವಿಲ್ಲದಂತಾ ನಾಯಕನಟನಾಗಿ ಬೆಳೆದುನಿಂತಮೇಲೂ ಸುಮ್ಮನೇ ಕೂರದ ಪರಿಮಳಾ ತಮ್ಮದೇ ಓದು, ವೃತ್ತಿಗಳನ್ನು ಮುಂದುವರೆಸಿದವರು. ಇಂಥ ಪರಿಮಳಾ ಜಗ್ಗೇಶ್ ಅವರಿಗೆ ತಮ್ಮ ಹಿರಿಯ ಮಗನ ಮದುವೆಯ ನಂತರ ಒಂದು ರೀತಿಯ ನಿವೃತ್ತಿಯ ಭಾವ ಕಾಡಲು ಶುರುವಾಯಿತಂತೆ. ಹೀಗಾಗಿ ಏನಾದರೂ ಮಾಡಬೇಕು ಎಂದು ಯೋಚಿಸಿದಾಗ ಎಫ್‌ಎಂನಿಂದ ಇಂಥದ್ದೊಂದು ವಿನೂತನ ಕಾರ್ಯಕ್ರಮ ನಡೆಸಿಕೊಡಬೇಕು ಎನ್ನುವ ಆಫರ್ ಬಂತಂತೆ.  ‘ನನ್ನಿಂದ ಕನ್ನಡವನ್ನು ಅಷ್ಟು ಸುಲಲಿತವಾಗಿ ಮಾತಾಡಲು ಸಾಧ್ಯವಾ? ಎಂದು ಸ್ವತಃ ತಮ್ಮ ಪತಿ ಜಗ್ಗೇಶ್ ಅವರ ಬಳಿ ಕೇಳಿದಾಗ ‘ನಿನ್ನಿಂದ ಸಾಧ್ಯ. ಹಿಂದೇಟು ಹಾಕಲೇಬೇಡ ಎಂದು ಹುರಿದುಂಬಿಸಿದರಂತೆ. ಹಾಗೆ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿದ ಪರಿಮಳಾ ಈಗಾಗಲೇ ಏಳು ಮಂದಿ ಸಾಧಕರ ಪತ್ನಿಯರನ್ನು ಮಾತಾಡಿಸಿದ್ದಾರೆ. ಅವು ಈ ವಾರದಿಂದ ಸರದಿಯಲ್ಲಿ ಒಂದೊಂದೇ ಪ್ರಸಾರಗೊಳ್ಳಲಿದೆ.
‘ಪರಿಚಯ ವಿತ್ ಪರಿಮಳ ಕಾರ್ಯಕ್ರಮದಲ್ಲಿ ಈಗಾಗಲೇ ಕ್ರಿಕೆಟ್ ಪಟು ವೆಂಕಟೇಶ್ ಪ್ರಸಾದ್ ಅವರ ಪತ್ನಿ ಜಯಂತಿ ಪ್ರಸಾದ್, ಮಾಜಿ ಸಚಿವ ಆರ್. ಅಶೋಕ್ ಅವರ ಪತ್ನಿ ಪ್ರಮಿಳಾ ಅಶೋಕ್, ಇಂದ್ರಜಿತ್ ಲಂಕೇಶ್ ಅವರ ಪತ್ನಿ ಅರ್ಪಿತಾ, ಯೋಗರಾಜ್ ಭಟ್ ಅವರ ಪತ್ನಿ ರೇಣುಕಾ, ಗುರುಕಿರಣ್ ಪತ್ನಿ ಪಲ್ಲವಿ ಸೇರಿದಂತೆ ಏಳು ಮಂದಿಯನ್ನು ಸಂದರ್ಶಿಸಿದ್ದಾರೆ. ಒಬ್ಬರಿಗಿಂತಾ ಒಬ್ಬರು ಅದ್ಭುತವಾಗಿ ಮಾತಾಡಿದ್ದಾರಂತೆ. ಯಾರಿಗೂ ತಿಳಿಯದ ತಮ್ಮ ಬದುಕಿನ ಗುಟ್ಟನ್ನು, ಸೂಕ್ಷ್ಮ ಸಂಗತಿಗಳನ್ನು ಹೊರಹಾಕಿದ್ದಾರಂತೆ. ಪ್ರತಿಯೊಬ್ಬರೂ ಅನೇಕ ಹೃದಯಸ್ಪರ್ಶಿ ವಿಚಾರಗಳನ್ನು ಹಂಚಿಕೊಂಡಿದ್ದಾರಂತೆ. ಈ ಎಲ್ಲಾ ಸೆಲೆಬ್ರಿಟಿಗಳ ಪತ್ನಿಯರ ಮಾತುಗಳು ಸಾಮಾನ್ಯ ಗೃಹಿಣಿಯರಿಗೆ ಸ್ಪೂರ್ತಿಯಾಗಲಿವೆ ಎನ್ನುವುದು ಸ್ವತಃ ಪರಿಮಳಾ ಜಗ್ಗೇಶ್ ಅವರ ಅಭಿಪ್ರಾಯ.
ಯಶಸ್ವೀ ಪುರುಷರ ಮಡದಿಯರಾಗಿದ್ದರೂ ಅನೇಕರು ಈವರೆಗೆ ಮಾಧ್ಯಮದಲ್ಲಿ ಮಾತಾಡಿದ ಅನುಭವವನ್ನೇ ಹೊಂದಿರುವುದಿಲ್ಲ. ಹೀಗಿರುವಾಗ ಅವರನ್ನು ನೇರಾ ನೇರ ಮಾತಿಗೆಳೆಯುವುದು ಸವಾಲಿನ ಕೆಲಸ. ಹೀಗಾಗಿ ಪರಿಮಳಾ ಜಗ್ಗೇಶ್ ಅವರು ಕಾರ್ಯಕ್ರಮ ಆರಂಭಿಸುವ ಮುನ್ನ ಅವರೊಟ್ಟಿಗೆ ಕನಿಷ್ಟ ಎರಡು-ಮೂರು ಗಂಟೆಗಳ ಕಾಲ ವಿಚಾರ ವಿನಿಮಯ ಮಾಡಿಕೊಳ್ಳುವ ಮೂಲಕ ಅವರನ್ನು ಮಾತಿಗೆ ತಯಾರು ಮಾಡುತ್ತಾರಂತೆ.
‘ಪರಿಚಯ ವಿತ್ ಮರಿಮಳ ಕಾರ್ಯಕ್ರಮದ ಮೂಲಕ ರೇಡಿಯೋ ಇತಿಹಾಸದಲ್ಲೇ ಹೊಸದೊಂದು ಹೆಜ್ಜೆಯಿರಿಸಲು ಅಣಿಯಾಗಿರುವ ಪರಿಮಳ ಜಗ್ಗೇಶ್ ಅವರು ಈ ಕಾರ್ಯಕ್ರಮದ ಮುಂಬರುವ ಸೀಸನ್‌ಗಳಲ್ಲಿ ಯಶಸ್ವೀ ಪುರುಷರ ತಾಯಂದಿರನ್ನು ಮಾತಾಡಿಸುವ ಉದ್ದೇಶ ಹೊಂದಿದ್ದಾರೆ. ಒಟ್ಟಾರೆಯಾಗಿ ಮಹಿಳಾಪರವಾದ ಕಾರ್ಯಕ್ರಮಗಳನ್ನು ಕ್ರಿಯಾಶೀಲವಾಗಿ ರೂಪಿಸಿಕೊಡಬೇಕೆನ್ನುವುದು ಪರಿಮಳಾ ಜಗ್ಗೇಶ್ ಅವರ ಕನಸು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed